ಧರ್ಮರಾಯ ಮಹಾಭಾರತದ ರಾಮ: ಎಂ.ಎಲ್. ಸಾಮಗ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಒಕ್ಟೋಬರ್ 21 , 2013
|
ಒಕ್ಟೋಬರ್ 21 , 2013
|
ಧರ್ಮರಾಯ ಮಹಾಭಾರತದ ರಾಮ: ಎಂ.ಎಲ್. ಸಾಮಗ
ಸುಳ್ಯ :
ರಾಮಾಯಣದಲ್ಲಿ ಹೇಗೆ ರಾಮ ಧರ್ಮಜ್ಞನಾಗಿದ್ದನೋ ಅದೇ ರೀತಿ ಮಹಾಭಾರತದಲ್ಲಿ ಧರ್ಮರಾಯ ಧರ್ಮಜ್ಞನಾಗಿದ್ದಾನೆ. ಧರ್ಮರಾಯ ಕ್ಷತ್ರಿಯ ಕುಲದಲ್ಲಿ ಹುಟ್ಟಿದ್ದರೂ ಸ್ವಭಾವತಃ ಬ್ರಾಹ್ಮಣ ನಂತಿದ್ದು, ಎಲ್ಲ ಕಡೆ ಮತ್ತು ಹಂತದಲ್ಲಿ ಅವನ ಸಾತ್ವಿಕ ಗುಣ ಅನಾವರಣಗೊಳ್ಳುತ್ತದೆ. ಅವನು ಒಬ್ಬ ಆದರ್ಶವಾದಿ, ವೌಲ್ಯಗಳ ಪ್ರತಿಪಾದಕ: ಹೀಗೆಂದು ಧರ್ಮರಾಯನ ಬಗ್ಗೆ ವಿವರಣೆ ನೀಡಿದರು ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವಾಧ್ಯಕ್ಷ ಪ್ರೊ. ಮಲ್ಪೆ ಲಕ್ಷ್ಮಿನಾರಾಯಣ ಸಾಮಗ.
ಅವರು ಭಾನುವಾರ ಇಲ್ಲಿನ ಸ್ನೇಹ ಶಾಲಾ ಆವರಣದಲ್ಲಿ ನಡೆಯುತ್ತಿರುವ 11 ದಿನಗಳ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನ ಕಲಾ ರಾಜ್ಯ ಮಟ್ಟದ ಕಾರ್ಯಗಾರದ 4ನೇ ದಿನದ ಕಾರ್ಯಕ್ರಮ 'ಕನ್ನಡ ಕಾವ್ಯಗಳಲ್ಲಿ ಪೌರಾಣಿಕ ಪಾತ್ರ ಚಿಂತನೆ'ಯಲ್ಲಿ 'ಧರ್ಮಭೀರು ಧರ್ಮರಾಯ' ಎಂಬ ವಿಷಯ ಮಂಡಿಸಿದರು.
ಧರ್ಮರಾಯನ ಕಾಳಜಿ ಇರುವುದು ಧರ್ಮದ ಬಗ್ಗೆ. ದೃಢ ನಿಲುವುಗಳನ್ನು ಎಲ್ಲ ಸಂದರ್ಭದಲ್ಲಿ ಪ್ರದರ್ಶನ ಮಾಡಿದ್ದಾನೆ. ಪಾಪಪ್ರಜ್ಞೆಯೂ ಸದಾ ಕಾಲದಲ್ಲಿತ್ತು. ಇದು ಪಾಂಡವರಿಗೆ ಹಿನ್ನಡೆಯೂ ಆಗಿರಬಹುದು. ನನ್ನ ಕುಟುಂಬದ ಸರ್ವನಾಶಕ್ಕೆ ಕಾರಣವಾಗಿದ್ದೇನೆ. ಆದುದರಿಂದ ನಾನು ವನವಾಸಕ್ಕೆ ಹೊರಡುತ್ತಾನೆ. ಅಷ್ಟು ಧರ್ಮಕ್ಕೆ ಬೆಲೆಕೊಟ್ಟವನು ಧರ್ಮರಾಯ ಎಂದು ಪ್ರೊ. ಎಲ್.ಎನ್. ಸಾಮಗ ವಿವರಿಸಿದರು.
ತನ್ನವರಿಗೆ ತನ್ನಿಂದ ಯಾವುದೇ ರೀತಿ ನೋವು ಆಗಬಾರದು ಎಂಬ ದೃಢ ನಿಲುವು ಹೊಂದಿದ್ದ ಧರ್ಮರಾಯ. ಅವನ ನೀತಿ ನಮ್ಮ ಎಲ್ಲ ಧರ್ಮ ಗಳಲ್ಲೂ, ಮತದಲ್ಲೂ ಇದೆ. ಅದು ಲೋಕನೀತಿ ಎಂದರು ಸಾಮಗ.
ಧರ್ಮಜ್ಞನನ್ನು ನೆನೆಸಿಕೊಂಡರೆ ನಮ್ಮಲ್ಲೂ ಅ ಪ್ರಜ್ಞೆ ಮೂಡುತ್ತದೆ. ಧರ್ಮರಾಯನ ಬಗ್ಗೆ ಕವಿವರ್ಯರೂ ವಿವರಿಸಿದ್ದಾರೆ ಎಂದು ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ತಹಸೀಲ್ದಾರ್ ಕೆ. ಮೋಹನ್ ರಾವ್ ಹೇಳಿದರು.
ಪಾತನಾಡ್ಕ ಶ್ಯಾಮ್ ಭಟ್ ಅಗಲಿದ ಯಕ್ಷಗಾನ ಕಲಾವಿದ ದಿ. ದೇರಾಜೆ ಸೀತಾರಾಮಯ್ಯ ಅವರ ಸಂಸ್ಮರಣೆ ಮಾಡಿದರು. ಕಾರ್ಯಕ್ರಮ ಸಂಯೋಜಕ ಡಾ. ಚಂದ್ರಶೇಖರ ದಾಮ್ಲೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಡಾ. ವೀಣಾ
ಫಾಲಚಂದ್ರ ಕಾರ್ಯಕ್ರಮ ನಿರೂಪಿಸಿದರು. ದ್ರೌಪದಿ ಸ್ವಯಂವರ, ಗಜನೋಹಿ, ಐರಾವತ ಪ್ರಸಂಗ ಪ್ರದರ್ಶನಗೊಂಡಿತು.
ಇಂದಿನ ಕಾರ್ಯಕ್ರಮ: ಮಧ್ಯಾಹ್ನ 2ರಿಂದ 5ರವರೆಗೆ ಸುಭದ್ರ ಕಲ್ಯಾಣ ಯಕ್ಷಗಾನ ಪ್ರದರ್ಶನ ಬಳಿಕ 'ಛಲದಂಕಮಲ್ಲ ದುರ್ಯೋಧನ' ಪಾತ್ರದ ಬಗ್ಗೆ ಪ್ರೊ.ಕಬ್ಬಿನಾಲೆ ವಸಂತ್ ಭಾರದ್ವಾಜ್ ಅವರಿಂದ ಉಪನ್ಯಾಸ. ಅ ಬಳಿಕ 6ರಿಂದ 9ರವರೆಗೆ ರಾಜಸೂಯ, ಮಾಗಧ, ಶಿಶುಪಾಲ ವಧೆ ಪ್ರಸಂಗ ಪ್ರದರ್ಶನ. ಸಚಿವರಿಗೆ ರಾಮಾಯಣ ಕರ್ತೃ ಗೊತ್ತಿಲ್ಲದ್ದು ವಿಪರ್ಯಾಸ
ವಾಲ್ಮೀಕಿ ಮಹಾಭಾರತ ಬರೆದರು ಎಂಬ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ಅವರ ಹೇಳಿಕೆ ಶೋಚನೀಯ ಎಂದು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಕುಂಬ್ಳೆ ಸುಂದರ ರಾವ್ ಹೇಳಿದರು. ರಾಮಾಯಣ ಬರೆದದ್ದು ಯಾರು ಎಂಬ ವಿಷಯ ಸಚಿವರಿಗೆ, ಅದರಲ್ಲೂ ಸಂಸ್ಕೃತಿ ಸಚಿವರಿಗೆ ಗೊತ್ತಿಲ್ಲದೇ ಇರುವುದು ವಿಪರ್ಯಾಸ ಎಂದು ಆಕ್ಷೇಪಿಸಿದರು. ಯಕ್ಷಗಾನ ಅಕಾಡೆಮಿಗೆ ಈ ವರೆಗೆ ಅಧ್ಯಕ್ಷರಾದ ಕುಂಬ್ಳೆ ಮತ್ತು ಸಾಮಗರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು.
ಕೃಪೆ : http://vijaykarnataka.indiatimes.com/
|
|
|